ವ್ಯಕ್ತಿ-ವಿಶೇಷ


ನರೇಂದ್ರ ದಾಮೋದರದಾಸ್ ಮೋದಿ

ನರೇಂದ್ರ ದಾಮೋದರದಾಸ್ ಮೋದಿ (ಗುಜರಾತಿ: નરેંદ્ર દામોદરદાસ મોદી) (ಜನನ: ಸೆಪ್ಟಂಬರ್ ೧೭೧೯೫೦) ಇವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳು. ಇವರುಅಕ್ಟೋಬರ್ ೭೨೦೦೧ ರಿಂದ ಮುಖ್ಯಮಂತ್ರಿಯಾಗಿದ್ದಾರೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಗುಜರಾತ್ ವಿಧಾನಸಭೆಯಲ್ಲಿ ಮಣಿನಗರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಹೊಂದಿದ್ದಾರೆ. ಇವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗು ಎನ್ ಡಿ ಎ ಯ ಪ್ರಧಾನ ಮಂತ್ರಿಯ ಉಮೇದುವಾರರಾಗಿ ಭಾರತದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವರು.

ಬಾಲ್ಯ
ಉತ್ತರ ಗುಜರಾತಿನ ಮೆಹನ್ಸಾ ಜಿಲ್ಲೆಯ ವಿದ್ ನಗರ ನರೇಂದ್ರ ಮೋದಿ 17 ಸೆಪ್ಟೆಂಬರ್, 1950ರಲ್ಲಿ ಹುಟ್ಟಿದರು. ಬಾಲ್ಯದಿಂದಲೇ ಜೀವನ ಮೌಲ್ಯ, ಸೇವಾ ಮನೋಭಾವ, ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದ್ದರು. ಅರವತ್ತರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದ್ದರು. 1967ರಲ್ಲಿ ಪ್ರವಾಹ ಪೀಡಿತ ಗುಜರಾತ್ ಜನತೆಯ ಸೇವೆ ಮಾಡಿದ್ದರು. ಆರೆಸ್ಸೆಸ್ ನಿಂದ ಕಲಿತ ಶಿಸ್ತು ಮೋದಿ ಜೀವನದಲ್ಲಿ ಏಳಿಗೆಗೆ ಕಾರಣವಾಯಿತು. ಅದ್ಭುತ ಸಂಘಟನಾ ಕೌಶಲ್ಯ ಮತ್ತು ಮನಃಶಾಸ್ತ್ರದ ಅಧ್ಯಯನ ಮಾಡಿದ್ದ ಮೋದಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ನಾಯಕರಾಗಿ ಆಯ್ಕೆಯಾಗಿದ್ದರು. ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಶಿಕ್ಷಣ

ಚಿಕ್ಕಂದಿನಿಂದಲೇ ಹಲವಾರು ಕಷ್ಟ ಕೋಟಲೆಗಳನ್ನು ಸಮರ್ಥವಾಗಿ ಎದುರಿಸಬೇಕಾಯಿತು, ಆದರೆ, ಅಡೆತಡೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ಕೇವಲ ವ್ಯಕ್ತಿತ್ವದ ಶಕ್ತಿ ಮತ್ತು ಧೈರ್ಯದಿಂದಲೇ ಸವಾಲುಗಳನ್ನು ಅವಕಾಶಗಳನ್ನಾಗಿ ಅವರು ಬದಲಿಸುತ್ತಿದ್ದರು. ಆದರಲ್ಲೂ ಕಾಲೇಜು ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯ ಸೇರಿದಾಗ ಇನ್ನಷ್ಟು ಕಠಿಣ ಹಾದಿಯಲ್ಲಿ ಮೋದಿ ಸಾಗಬೇಕಾಯಿತು. ಬದುಕೆಂಬ ಯುದ್ಧದಲ್ಲಿ ನೈಜ ಸೈನಿಕನಂತೆ ಹೋರಾಟ ನಡೆಸಿಕೊಂಡು ಬಂದರು. ಸೋಲುವುದು, ಹಿಂಜರಿಕೆ ವಿರುದ್ಧ ಪ್ರಬಲವಾಗಿ ಮುನ್ನುಗ್ಗುತ್ತಿದ್ದರು.ಅವರು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಡನೆ ತಮ್ಮ ಸಾಂಗತ್ಯವನ್ನು ಆರಂಭಿಸಿದರು. ಆರೆಸ್ಸೆಸ್ ನಲ್ಲಿದ್ದಾಗ ಮೋದಿ ಅವರು ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಡರು. ಪ್ರಮುಖವಾಗಿ 1974ರಲ್ಲಿ ನವನಿರ್ಮಾಣ ಭ್ರಷ್ಟಾಚಾರ ವಿರೋಧಿ ಚಳವಳಿ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡ 19 ತಿಂಗಳ (ಜೂನ್ 1975 ರಿಂದ ಜನವರಿ 1977) ತುರ್ತುಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಭೂಗತರಾಗಿಯೇ ಉಳಿದ ಮೋದಿಯವರು ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರು.

ರಾಜಕೀಯ ಜೀವನ

1987ರಲ್ಲಿ ಬಿಜೆಪಿ ಸೇರುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮೋದಿ ಧುಮುಕಿದರು. ಪಕ್ಷ ಸೇರಿದ ಒಂದು ವರ್ಷದಲ್ಲೇ ಗುಜರಾತ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು. ಆ ಹೊತ್ತಿಗಾಗಲೆ ಅವರು ಅತ್ಯಂತ ಸಮರ್ಥ ಸಂಘಟನಾಕಾರ ಎಂದು ಎಲ್ಲೆಡೆ ಗುರುತಿಸಿಕೊಂಡಿದ್ದರು. ರಾಜಕೀಯವಾಗಿ ಪ್ರಗತಿ ಕಂಡ ಪಕ್ಷದಿಂದ 1990ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಸಾಧ್ಯವಾಯಿತು. 1988 ಮತ್ತು 1995ರ ನಡುವೆ ಗುಜರಾತಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿಯವರು ಮಾಸ್ಟರ್ ತಂತ್ರಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಅವಧಿಯಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಮಟದಲ್ಲಿ ಎರಡು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುವ ಜವಾಬ್ದಾರಿ ನೀಡಲಾಯಿತು. ಎಲ್ ಕೆ ಅಡ್ವಾಣಿಯವರ ಸೋಮನಾಥದಿಂದ ಅಯೋಧ್ಯಾವರೆಗಿನ ರಥಯಾತ್ರೆ (ಅತಿ ದೊಡ್ಡ ಯಾತ್ರೆ) ಮತ್ತು ದಕ್ಷಿಣದ ತುದಿಯಲ್ಲಿರುವ ಕನ್ಯಾಕುಮಾರಿ(ದಕ್ಷಿಣ ಭಾರತ ತುತ್ತತುದಿ)ಯಿಂದ ಉತ್ತರದ ತುದಿಯಲ್ಲಿರುವ ಕಾಶ್ಮೀರದವರೆಗೆ ಯಾತ್ರೆ ನಡೆಸುವ ಗುರುತರ ಜವಾಬ್ದಾರಿಯನ್ನು ಮೋದಿಯವರು ಹೊತ್ತುಕೊಂಡರು. 1998ರಲ್ಲಿ ನವದೆಹಲಿಯಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆಗೆ ಮೋದಿ ನಿಭಾಯಿಸಿದ ಇದೇ ಎರಡು ರಥಯಾತ್ರೆಗಳು ಕಾರಣ ಎನ್ನಲಾಗಿದೆ. 1995ರಲ್ಲಿ ಅವರು ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದ ನರೇಂದ್ರ ಮೋದಿ ಅವರಿಗೆ ಭಾರತದ ಐದು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಯಿತು. 1998ರಲ್ಲಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆ ಅಲಂಕರಿಸಿದರು. 2001ರ ಅಕ್ಟೋಬರ್ ವರೆಗೂ ಈ ಹುದ್ದೆಯನ್ನು ನಿಭಾಯಿಸಿದರು. ರಾಷ್ಟ್ರ ಮಟ್ಟದಲ್ಲಿ ನರೇಂದ್ರ ಮೋದಿಯವರು ಕರ್ತವ್ಯ ನಿಭಾಯಿಸುತ್ತಿದ್ದಾಗ, ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರ, ಮತ್ತು ಅಷ್ಟೇ ಸೂಕ್ಷ್ಮವಾಗಿದ್ದ ಈಶಾನ್ಯ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳಲ್ಲಿನ ಪಕ್ಷದ ವ್ಯವಹಾರ ಉಸ್ತುವಾರಿಯನ್ನು ವಹಿಸಲಾಯಿತು. ಅನೇಕ ರಾಜ್ಯಗಳಲ್ಲಿ ಪಕ್ಷದ ಸಂಘಟನಾ ವ್ಯವಸ್ಥೆಯನ್ನು ಪುನರಾಚಿಸಿ ಪಕ್ಷದ ಬಲವರ್ಧನೆಗೆ ಮೋದಿ ಕಾರಣರಾದರು. ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುವಾಗ ನರೇಂದ್ರ ಮೋದಿ ಅವರು ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಅನೇಕ ಸಂದರ್ಭಗಳಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಅವಧಿಯಲ್ಲಿ ಮೋದಿ ಅವರು ವಿಶ್ವದಾದ್ಯಂತ ಪ್ರವಾಸ ಮಾಡಿ ವಿವಿಧ ದೇಶದ ಪ್ರಮುಖ ನಾಯಕರನ್ನು ಭೇಟಿ ಮಾಡಿದರು. ಈ ಪ್ರವಾಸ ಅನುಭವ ಹೊಸ ಜಾಗತಿಕ ದೃಷ್ಟಿಕೋನ ಬೆಳೆಸಿಕೊಳ್ಳಲು ಸಹಕಾರಿಯಾಯಿತು.

ಗುಜರಾತ್ ಮುಖ್ಯಮಂತ್ರಿ

2001 ಅಕ್ಟೋಬರ್ ನಲ್ಲಿ ಗುಜರಾತ್ ಸರಕಾರವನ್ನು ಮುನ್ನಡೆಸಬೇಕೆಂದು ಅವರಿಗೆ ಪಕ್ಷದ ವರಿಷ್ಠರಿಂದ ಕರೆ ಬಂದಿತು. ಮೋದಿ ಅವರ ಸರಕಾರ ಅಕ್ಟೋಬರ್ 7, 2001ರಂದು ಅಧಿಕಾರವಹಿಸಿಕೊಂಡಾಗ ಗುಜರಾತಿನ ಆರ್ಥಿಕ ಪರಿಸ್ಥಿತಿ ಅನೇಕ ಪ್ರಾಕೃತಿಕ ವಿಕೋಪಗಳ ಜೊತೆ ಹೋರಾಟ ನಡೆಸಿತ್ತು. ಅದೇ ವರ್ಷ ಜನವರಿಯಲ್ಲಿ ಸಂಭವಿಸಿದ ಭಾರಿ ಭೂಕಂಪ ಸೇರಿದಂತೆ ಅನೇಕ ಪ್ರಕೃತಿ ಅನಾಹುತಗಳು ಸರಕಾರವನ್ನು ಕಂಗೆಡಿಸಿತ್ತು. ಆದರೆ, ದೇಶ ವಿದೇಶಗಳನ್ನು ಸುತ್ತಾಡಿ ವಿಪತ್ತು ನಿರ್ವಹಣೆ ಅನುಭವ ಪಡೆದಿದ್ದ ಮೋದಿ ಈ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದರು. ಜನವರಿ 2001ರ ಭೀಕರ ಭೂಕಂಪದಿಂದ ಉಂಟಾದ ಹಾನಿಯನ್ನು ಸರಿಪಡಿಸುವುದು ಮತ್ತು ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವುದು, ಪುನರ್ನಿಮಾಣ ಕಾರ್ಯ ಮುಖ್ಯಮಂತ್ರಿ ಮೋದಿ ಅವರು ಎದುರಿಸಿದ ಅತಿ ದೊಡ್ಡ ಸವಾಲಾಗಿತ್ತು. ತೀವ್ರ ಹಾನಿಗೊಳಗಾಗಿದ್ದ ಭುಜ್ ನಗರ ಸಂಪೂರ್ಣ ನಿರ್ನಾಮವಾಗಿತ್ತು ಮತ್ತು ಸಾವಿರಾರು ನಿರಾಶ್ರಿತರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿದ್ದರು. ಆದರೆ ಇಂದು ಭುಜ್ ಅಚ್ಚರಿಪಡುವಂತೆ ಅಭಿವೃದ್ಧಿ ಕಂಡಿದೆ. ಗುಜರಾತ್ ಯಾವಾಗಲೂ ಔದ್ಯಮಿಕ ಪ್ರಗತಿಯತ್ತ ತನ್ನ ದೃಷ್ಟಿ ನೆಟ್ಟಿದೆ. ಸಾಮಾಜಿಕ-ಆರ್ಥಿಕ ಬೆಳವಣಿಗೆಗಾಗಿ ಸಾಮಾಜಿಕ ವಲಯದಲ್ಲಿ ಉಂಟಾಗಿದ್ದ ಅಸಮತೋಲನವನ್ನು ಸರಿಪಡಿಸಲು ಮೋದಿ ಅಂದೇ ನಿರ್ಧರಿಸಿದ್ದರು. ರಾಜ್ಯದ ಪ್ರಗತಿಗಾಗಿ ಐದು ಅಂಶಗಳ ಸಮನ್ವಯ ಅಭಿವೃದ್ಧಿ ಯೋಜನೆ ಪಂಚಾಮೃತ್ ಯೋಜನೆ ಹುಟ್ಟುಹಾಕಿದರು. ಅವರ ನಾಯಕತ್ವದಲ್ಲಿ ಶಿಕ್ಷಣ, ಕೃಷಿ, ಆರೋಗ್ಯ ಮುಂತಾದ ಕ್ಷೇತ್ರಗಳು ಭಾರಿ ಪರಿವರ್ತನೆಯನ್ನು ಕಂಡಿವೆ. ರಾಜ್ಯದ ಭವಿಷ್ಯತ್ತಿನ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದ ಮೋದಿ, ಅನೇಕ ಪರಿವರ್ತನಾ ಕಾರ್ಯಕ್ರಮಗಳನ್ನು ಆರಂಭಿಸಿದರು, ಅವರು ಅಧಿಕಾರಕ್ಕೆ ಬಂದು 100 ದಿನಗಳಲ್ಲೇ ಅವರ ಸಾಮರ್ಥ್ಯ, ಆಕಾಂಕ್ಷೆಗಳು ಗೋಚರಿಸತೊಡಗಿದವು. ಆಡಳಿತ ನಡೆಸುವ ಸಾಮರ್ಥ್ಯ, ಸ್ಪಷ್ಟ ನಿಲುವು ಮತ್ತು ದೃಢ ವ್ಯಕ್ತಿತ್ವದಿಂದಾಗಿ 2002ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 182 ಸೀಟುಗಳ ಪೈಕಿ 128 ಸೀಟುಗಳನ್ನು ಪಡೆದು ಭರ್ಜರಿ ಗೆಲುವಿನಿಂದಾಗಿ ಮೋದಿ ಮತ್ತೆ ಅಧಿಕಾರಕ್ಕೆ ಮರಳಿ ಬಂದರು. ಇದೇ ರೀತಿ ಸಾಧನೆ 2007ರಲ್ಲೂ ಮುಂದುವರೆಯಿತು ಮತ್ತೊಂದು ಚುನಾವಣೆಯಲ್ಲಿ ಮೋದಿ ಅವರ ನೇತೃತ್ವದ ಬಿಜೆಪಿ ದಾಖಲೆಯ ವಿಜಯ ಸಾಧಿಸಿತು. 2012 ಸೆಪ್ಟೆಂಬರ್ 17ರಂದು ನರೇಂದ್ರ ಮೋದಿ ಅವರು ಗುಜರಾತಿನ ಜನರ ಸೇವೆ ಸಲ್ಲಿಸಲು ಅಧಿಕಾರ ವಹಿಸಿಕೊಂಡು 4,000 ದಿನ ಯಶಸ್ವಿಯಾಗಿ ಪೂರೈಸಿದರು. ಸತತ ಮೂರು ಚುನಾವಣೆಯಲ್ಲಿ ಮೋದಿ ಅವರಿಗೆ ಗುಜರಾತಿನ ಜನರ ಬೆಂಬಲ, ಮನ್ನಣೆ ಸಿಕ್ಕಿತು. 2002 ಹಾಗೂ 2007 (117 ಸೀಟುಗಳು)ರಲ್ಲಿ ಪಕ್ಷವನ್ನು ಗೆಲ್ಲುವಂತೆ ಮಾಡಿದ ಮೋದಿ ಅವರು 2012ರ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದರು. ಈ ಚುನಾವಣೆಯಲ್ಲಿ ಬಿಜೆಪಿ 115 ಸೀಟುಗಳೊಂದಿಗೆ ವಿಜಯ ಪತಾಕೆ ಹಾರಿಸಿತು. ನರೇಂದ್ರ ಮೋದಿ ಅವರು ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ 2012ರ ಡಿಸೆಂಬರ್ 12ರಂದು ಪ್ರಮಾಣ ವಚನ ಸ್ವೀಕರಿಸಿದರು. ಇ-ಆಡಳಿತ, ಬಂಡವಾಳ ಹೂಡಿಕೆ, ಬಡತನ ನಿರ್ಮೂಲನ, ಇಂಧನ, ಎಸ್ಇಜೆಡ್, ರಸ್ತೆ ಅಭಿವೃದ್ಧಿ, ಹಣಕಾಸು ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಗುಜರಾತ್ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿದೆ. ಗುಜರಾತಿನ ಪ್ರಗತಿ ಕಥೆ ಯಾವುದೇ ಒಂದು ಕ್ಷೇತ್ರದ ಅಭಿವೃದ್ಧಿಯನ್ನು ಆಧಾರವಾಗಿಲ್ಲ, ಬದಲಿಗೆ ಎಲ್ಲಾ ಮೂರು ಪ್ರಮುಖ ಕ್ಷೇತ್ರ (ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರ)ಗಳ ಅಭಿವೃದ್ಧಿಯ ದ್ಯೋತಕವಾಗಿದೆ. ಗುಜರಾತಿನ ತ್ವರಿತ ಪ್ರಗತಿಗೆ ಮೋದಿ ಅವರ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಹಾಗೂ ಜನಪರ, ಉತ್ತಮ ಆಡಳಿತ ಪರ(P2G2) ಮಂತ್ರವೇ ಕಾರಣವಾಗಿದೆ. ಇವರು ಭಾರಿ ಪ್ರತಿರೋಧದ ನಡುವೆಯೂ ನರ್ಮದಾ ಅಣೆಕಟ್ಟನ್ನು 121.9 ಮೀಟರ್ ಎತ್ತರಕ್ಕೇರಿಸಲು ಹೋರಾಟ ನಡೆಸಿದರು. ನಿರ್ಮಾಣಕ್ಕೆ ಅಡ್ಡಿಪಡ್ಡಿಪಡಿಸುವ ವಿರೋಧಿಗಳನ್ನು ಹಿಮ್ಮೆಟ್ಟಿಸಲು ಅವರು ಉಪವಾಸ ಸತ್ಯಾಗ್ರಹವನ್ನೂ ಮಾಡಿದರು. ಜಲ ಸಂಪನ್ಮೂಲ ರಕ್ಷಣೆ ಮತ್ತು ನಿರ್ವಹಣೆ, ಸದ್ಬಳಕೆಗಾಗಿ ಗುಜರಾತಿನಲ್ಲಿ ಅವರು ಪ್ರಾರಂಭಿಸಿದ 'ಸುಜಲಾಂ ಸುಫಲಾಂ' ಯೋಜನೆ ಮಹತ್ವದ್ದಾಗಿದೆ. ಮಣ್ಣು ಫಲವತ್ತತೆ ಕಾರ್ಡ್, ರೋಮಿಂಗ್ ರೇಷನ್ ಕಾರ್ಡ್ ಹಾಗೂ ರೋಮಿಂಗ್ ಶಾಲೆ ಕಾರ್ಡ್ ಯೋಜನೆಗಳು ಮೋದಿ ಅವರಿಗಿರುವ ಜನ ಸಾಮಾನ್ಯರ ಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ವಿವಿಧ ಆಯಾಮಗಳಲ್ಲಿ ಗುಜರಾತಿನ ಅಭಿವೃದ್ಧಿಗಾಗಿ ಕೃಷಿ ಮಹೋತ್ಸವ, ಚಿರಂಜೀವಿ ಯೋಜನೆ, ಮಾತೃ ವಂದನಾ, ಬೇಟಿ ಬಚಾವೋ (ಹೆಣ್ಣುಮಗುವನ್ನು ಉಳಿಸಿ) ಆಂದೋಲನ, ಜ್ಯೋತಿಗ್ರಾಮ ಯೋಜನೆ, ಕರ್ಮಯೋಗಿ ಅಭಿಯಾನ, ಇ-ಮಮತಾ, ಇಎಂಪವರ್, ಸ್ಕೋಪ್, ಐಕ್ರಿಯೇಟ್ ಇತ್ಯಾದಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಮೋದಿಯವರು ತಮ್ಮ ಹೊಸಬಗೆ ಚಿಂತನೆ, ದೂರದೃಷ್ಟಿತ್ವ, ಪರಿಕಲ್ಪನೆಗಳನ್ನು ಗುಜರಾತಿನ ಜನರಿಗೆ ಅತ್ಯಂತ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಗುಜರಾತಿನ ಸುಮಾರು 6 ಕೋಟಿಗೂ ಅಧಿಕ ಜನರಲ್ಲಿ ಹೊಸ ಆಶಾಭಾವ, ನಂಬಿಕೆ, ವಿಶ್ವಾಸವನ್ನು ಹುಟ್ಟುಹಾಕಿದ್ದಾರೆ. ಧಾರ್ಮಿಕ ಗುರುಗಳ ಬಗ್ಗೆ ಅವರಿಗಿರುವ ಗೌರವ ರಾಜ್ಯದಲ್ಲಿ ಧಾರ್ಮಿಕ ಸಾಮರಸ್ಯವನ್ನು ಮೂಡಿಸಿದೆ. ಧರ್ಮ, ರಾಜಕೀಯ ಭೇದ ಮರೆತು ಎಲ್ಲಾ ವಯೋಮಾನದ, ಎಲ್ಲಾ ವರ್ಗದ ಜನರು ಅವರನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಮನದಟ್ಟಾಗುವಂತೆ ಆಡಳಿತ ನಡೆಸಿ ತಮ್ಮ ಜೀವನಮಟ್ಟ ಎತ್ತಿಹಿಡಿಯುವ ನಾಯಕ ಎಂದು ಗುರುತಿಸಿದ್ದಾರೆ. ಅತ್ಯಂತ ನಿಪುಣ ವಾಗ್ಮಿಯಾಗಿರುವ ಅವರು ನಗರ ಮತ್ತು ಹಳ್ಳಿ ಜನರ ಪ್ರೀತಿ ಗಳಿಸಿದ್ದಾರೆ. ಹೀಗಾಗಿ ಸಮಾಜದ ಎಲಾ ವರ್ಗ, ಜಾತಿ ಹಾಗೂ ವಿವಿಧ ಆರ್ಥಿಕ ಸ್ತರದಲ್ಲಿರುವ ಜನರು ಮೋದಿ ಅವರ ಅನುಯಾಯಿಯಾಗಿದ್ದಾರೆ.

No comments:

Post a Comment